ವಕ್ಕಲೇರಿಯ ಮಾರ್ಕಂಡೇಶ್ವರಸ್ವಾಮಿ ಜಯಂತಿ
ಚಿನ್ನದ ನಾಡು ಕೋಲಾರ ಜಿಲ್ಲೆಯಲ್ಲಿರುವ ಪುರಾತನ ಪುಣ್ಯಕ್ಷೇತ್ರ ವಕ್ಕಲೇರಿ. ಅರಣ್ಯ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾದ ರಮಣೀಯ ಮಾರ್ಕಂಡೇಶ್ವರಸ್ವಾಮಿ ಬೆಟ್ಟವಿದೆ. ಬೆಟ್ಟಕ್ಕೆ ಈ ಹೆಸರು ಬರಲು ಕಾರಣ ಬೆಟ್ಟದ ಮೇಲಿರುವ ಶ್ರೀ ಮಾರ್ಕಂಡೇಶ್ವರಸ್ವಾಮಿಯ ಬೃಹತ್ ದೇವಾಲಯ.
ಬಿಳಿಬೆಟ್ಟ ಶ್ರೀ ಮಾರ್ಕಂಡೇಯ ನದಿಯ ಉಗಮ ಸ್ಥಾನವಾಗಿದ್ದು, ಬಂಗಾರಪೇಟೆ ತಾಲ್ಲೂಕು ಬೂದಿಕೋಟ ಬಳಿ ಶ್ರೀ ಮಾರ್ಕಂಡೇಯ ಜಲಾಶಯವೇ ಇದೆ.
ವಕ್ಕಲೇರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಆರಾಧ್ಯ ದೈವವಾಗಿ ಹಾಗೂ ಪದ್ಮಶಾಲಿ ಜನಾಂಗದ ಕುಲದೈವವಾದ ಮಾರ್ಕಂಡೇಶ್ವರಸ್ವಾಮಿ ಅವತಾರದ ಬಗ್ಗೆ ಪುರಾಣದಲ್ಲಿ ಒಂದು ಕಥೆಯಿದೆ.
ಐತಿಹ್ಯ
ಬ್ರಹ್ಮ ಮಾನಸ ಪುತ್ರನಾದ ಭೃಗು ಮಹರ್ಷಿಯ ವಂಶಸ್ಥನಾದ ಮೃಕಂಡು ಮಹಾಮುನಿ ಹಾಗೂ ಮರುಧ್ವತಿ ದೇವಿ ದಂಪತಿಗೆ ಬಹಳ ಕಾಲ ಮಕ್ಕಳಿಲ್ಲದಿದ್ದರಿಂದ ಮೃಕಂಡು ಪುತ್ರಾರ್ಥಿಯಾಗಿ ಪರಮೇಶ್ವರನನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗಿ ಜ್ಞಾನಿಯೂ ದೈವಭಕ್ತನೂ ಆದ ಅಲ್ಪಾಯುಷಿ ಮಗ ಬೇಕೋ ಅಥವಾ ದೀರ್ಘಾಯುಷಿಯಾದ ಲೋಕಕಂಟಕನಾದ ಮಗ ಬೇಕೋ ಎಂದು ಕೇಳಿದಾಗ, ಮೃಕಂಡು ಅಲ್ಪಾಯುಷಿಯಾದರೂ ಜ್ಞಾನಿಯಾದ ಮಗನೇ ಬೇಕೆನ್ನುತ್ತಾನೆ. ಹೀಗೆ ಅಲ್ಪಾಯುಷಿಯಾಗಿ ಜನಿಸಿದವನೇ ಮಾರ್ಕಂಡೇಯ.
ತಾನು ಅಲ್ಪಾಯು ಎಂದು ತಿಳಿದ ಮಾರ್ಕಂಡೇಯ, ತನ್ನ ತಂದೆ, ತಾಯಿಗಳ ಸಂತುಷ್ಟಿಗಾಗಿ ಶಿವನನ್ನು ಕುರಿತು ತಪವನ್ನಾಚರಿಸುತ್ತಾನೆ. ಆತನ ಆಯುಶ್ ಮುಗಿದ ದಿನ ಈಗಿನ ವಕ್ಕಲೇರಿಯ ಬೆಟ್ಟದ ಶಿಖರದಲ್ಲಿ ಮಾರ್ಕಂಡೇಯ ಶಿವಪೂಜೆಯಲ್ಲಿದ್ದಾಗ, ಅವನ ಪ್ರಾಣ ಕೊಂಡೊಯ್ಯಲು ಬಂದ ಯಮಧರ್ಮ, ಅವನ ಕೊರಳಿಗೆ ಪಾಶ ಹಾಕಿದಾಗ ಮಾರ್ಕಂಡೇಯ ಶಿವಲಿಂಗ ತಬ್ಬಿ ಹಿಡಿಯುತ್ತಾನೆ. ಯಮ ಬಲವಂತ ಮಾಡಿ ಎಳೆದಾಗ, ಲಿಂಗದಿಂದ ಕೋಪವಿಷ್ಟನಾಗಿ ಎದ್ದ ಶಿವ,ತನ್ನ ತ್ರಿಶೂಲದಿಂದ ಯಮನನ್ನೇ ಕೊಲ್ಲಲು ಮುಂದಾಗುತ್ತಾನೆ. ನಂತರ ಶಾಂತನಾಗಿ ಮಾರ್ಕಂಡೇಯನಿಗೆ ಚಿರಂಜೀವಿಯಾಗೆಂದು ವರ ನೀಡುತ್ತಾನೆ.
ಯಮನನ್ನು ಗೆದ್ದು ಚಿರಂಜೀವಿಯಾದ ಮಾರ್ಕಂಡೇಯನನ್ನು ರಕ್ಷಿಸಲು ಭುವಿಯಲ್ಲಿ ಅವತರಿಸಿದ ಶಿವ ಇದೇ ಬೆಟ್ಟದಲ್ಲಿ ಮಾರ್ಕಂಡೇಶ್ವರನಾಗಿ ಬೆಟ್ಟವೇರಿ ಬರುವ ಭಕ್ತರನ್ನು ಸಲಹುತ್ತಿದ್ದಾನೆ.
ಮಾರ್ಕಂಡೇಯನಿಗೆ ಯಮನ ಪಾಶದಿಂದ ವಿಮುಕ್ತಿಗೊಳ್ಳುವ ವರ ನೀಡಿದ ಕಾರಣದಿಂದ ಇದಕ್ಕೆ ‘ ವರಪುರಿ “ ಎಂದು ಹೆಸರು ಬಂತು ಎಂದು ಸ್ಕಾಂದ ಪುರಾಣದಲ್ಲಿ ಉಲ್ಲೇಖವಿದೆ. ಕ್ರಮಕಪುರಿ ಎಂದೂ ಕರೆಸಿಕೊಂಡಿದ್ದ ಈ ಊರು ನಂತರ ವಕ್ಕಲೇರಿಯಾಯಿತು ಎಂದು ಸ್ಥಳೀಯರು ಹೇಳುತ್ತಾರೆ.
ಮಾರ್ಕ೦ಡೇಯ ಪರ್ವತ ದೇವಾಲಯ
ಈ ದೇವಾಲಯವು ವಿಶಾಲವಾದ ಏಕಶಿಲಾ ಬೆಟ್ಟದ ಮೇಲೆ ನಿರ್ಮಿತವಾಗಿದ್ದು, ಈ ಬೃಹತ್ ವಿಶಾಲವಾದ ಬಂಡೆಯಲ್ಲಿ ಒಂದು ಅಡಿ ಅಗಲದ ಸುಮಾರು ಉದ್ದವಾದ ಕಪ್ಪಾದ ಪಟ್ಟಿಯು ಬಂಡೆಯ ದಕ್ಷಿಣ ಪಾರ್ಶ್ವದಿಂದ ಗರ್ಭಾಂಕಣದವರೆಗೆ ಬಂಡೆಯಲ್ಲಿ ಮೂಡಿ ಬಂದಿದೆ. ಇದರ ಬಗ್ಗೆ ಯಮಧರ್ಮರಾಯನು ಮಾರ್ಕಂಡೇಯನಿಗೆ ಯಮಪಾಶವನ್ನು ಹಾಕಿ ಎಳೆದ ಕುರುಹುಗಳು ಬೆಟ್ಟದ ಮೇಲಿರುವ ಬಾವಿಯಲ್ಲಿ ಇಂದಿಗೂ ಕಾಣಿಸುತ್ತದೆ ಎನ್ನಲಾಗುತ್ತದೆ. ಯಮ ಬಂದು ಎಳೆದಾಗ ಮಾರ್ಕಂಡೇಯ ಶಿವಲಿಂಗವನ್ನು ಕೈಗಳಿಂದ ತಬ್ಬಿ ಹಿಡಿದಾಗ ಮೂಡಿತೆನ್ನಲಾದ ಉಗುರಿನ ಗುರುತುಗಳು ಶಿವಲಿಂಗದ ಮೇಲಿವೆ.
೧೨ನೇ ಶತಮಾನದ ಆದಿಯಲ್ಲಿ ಪ್ರಾರಂಭವಾದ ದೇವಾಲಯ ನಿರ್ಮಾಣ ಕಾರ್ಯ ೧೬ನೇ ಶತಮಾನದವರೆವಿಗೆ ನಡೆಯಿತೆಂಬುದು ಇತಿಹಾಸದಿಂದ ವೇದ್ಯವಾಗುತ್ತದೆ. ಚೋಳರು, ವಿಜಯನಗರದ ಅರಸರು ದೇವಾಲಯ ಅಭಿವೃದ್ಧಿ ಪಡಿಸಿದ್ದಾರೆ. ಇತ್ತೀಚೆಗೆ ೧೯೭೦ರಲ್ಲಿ ಶ್ರೀ ಪಟೇಲ್ ವೆಂಕಟರಾಮೇಗೌಡ ರವರು ಶ್ರಮವಹಿಸಿ ಬೆಟ್ಟ ಹತ್ತಿಬರಲು ಸುಲಭವಾದ ಮೆಟ್ಟಲುಗಳನ್ನು ನಿರ್ಮಿಸಿದ್ದಾರೆ.

ನವರಂಗದಲ್ಲಿರುವ ದ್ವಾರ ಪಾಲಕರ ವಿಗ್ರಹಗಳು ಗಮನಸೆಳೆಯುವಂತಿವೆ. ಈ ದೇವಾಲಯದ ಕಲ್ಯಾಣ ಮಂಟಪ ಹಾಗೂ ನವರಂಗದಲ್ಲಿರುವ ಕಂಬಗಳು ಅತಿ ಸುಂದರವಾದ ಸೂಕ್ಷ್ಮ ಕೆತ್ತನೆಯಿಂದ ಮನಸೂರೆಗೊಳ್ಳುತ್ತವೆ.

ಈ ದೇವಾಲಯ ಹಿಂಭಾಗದ ಸುಮಾರು ೩ ಪರ್ಲಾಂಗ್ ದೂರದಲ್ಲಿ ಬಿಳಿ ಬೆಟ್ಟವಿದ್ದು ಇಲ್ಲಿ ವೀರಾಂಜನೇಯ ದೇವಾಲಯ ಇದೆ. ಈ ಪ್ರದೇಶಕ್ಕೆ ರಾಮಾಯಣ ಕಾಲದಲ್ಲಿ ಲವಕುಶ ಹಾಗೂ ಸೀತಾರಾಮರು ಬಂದಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿಯ ಒಂದು ಗುಹೆಯಲ್ಲಿ ಮಕ್ಕಳು ಮಲಗುವಂತಹ ಶಿಲಾ ತೊಟ್ಟಿಲುಗಳಿದ್ದು, ಇಲ್ಲಿ ಲವಕುಶರು ಮಲಗುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.
ಬಿಳಿಬೆಟ್ಟ
ಶ್ರೀ ಮಾರ್ಕಂಡೇಯ ನದಿಯ ಉಗಮ ಸ್ಥಾನವಾಗಿದ್ದು, ಬಂಗಾರಪೇಟೆ
ತಾಲ್ಲೂಕು ಬೂದಿಕೋಟ ಬಳಿ ಶ್ರೀ ಮಾರ್ಕಂಡೇಯ ಜಲಾಶಯವೇ ಇದೆ.
ಸೋಮವಾರ
ಬೆಳಗ್ಗೆ 10:00 ರಿಂದ
ಸಂಜೆ 4:30 ರವರೆಗೆ ದೇವಾಲಯ ತೆರೆದಿರುತ್ತದೆ. ಮಂಗಳವಾರದಿಂದ
ಭಾನುವಾರದವರೆಗೆ ಬೆಟ್ಟಕ್ಕೆ ಬರುವ ಭಕ್ತರು, ಟ್ರಸ್ಟ್
ಖಜಾಂಚಿಯವರಾದ ಸಿ.ಎಂ.ಮಾರ್ಕಂಡಪ್ಪ
ಅವರಿಗೆ 9449619980 ಅಥವಾ ಅರ್ಚಕರಾದ ಸಿ. ರವಿಶಂಕರ್
ಅವರನ್ನು 9448641948, 08152-237575 ದೂರವಾಣಿ ಮೂಲಕ ಸಂಪರ್ಕಿಸಿ ಹೋದರೆ, ದೇವರ ದರ್ಶನ ಮಾಡಬಹುದು.
ಮಾರ್ಗ
ಬೆಂಗಳೂರು
ನಗರದಿಂದ ಮಾಲೂರಿನ ಮುಖಾಂತರ ಹೋದರೆ 65 ಕಿಲೋಮೀಟರ್ ಮಾಲೂರಿನ
ಬಾಲಾಜಿಥಿಯೇಟರ್ ಸರ್ಕಲ್ ಬಳಿ ಎಡಕ್ಕೆ ತಿರುಗಿ ಹೋಗಬೇಕು), ಕೋಲಾರದ
ಮುಖಾಂತರ ಹೋದರೆ 75 ಕಿಲೋಮೀಟರ್ ಕೋಲಾರಕ್ಕೆ 2 ಕಿ.ಮೀ. ಮೊದಲು ಕೃಷಿ
ಉತ್ಪನ್ನ ಮಾರುಕಟ್ಟೆ ಅಲ್ಲಿ ಬಲಕ್ಕೆ ತಿರುಗಿ ಹೋಗಬೇಕು ಕೋಲಾರ ಹಾಗೂ ಮಾಲೂರು ಎರಡು ಕಡೆಯಿಂದ 13 ಕಿ.ಲೋ.ಮೀಟರ್
ಮಧ್ಯದಲ್ಲಿರುವ ವಕ್ಕಲೇರಿ
ಗ್ರ್ರಾಮದಿಂದ 3 ಕಿ.ಮೀ. ದೂರದಲ್ಲಿ ದೇವಾಲಯವಿದೆ. ಬಸ್ಸಿನಲ್ಲಿ ಬರುವವರು ಮಾಲೂರು ಇಲ್ಲವೆ ಕೋಲಾರ
ದಿಂದ ವಕ್ಕಲೇರಿ ಗ್ರಾಮಕ್ಕೆ ಹೋಗುವ ಬಸ್ಸಿನಲ್ಲಿ ಬಂದು ವಕ್ಕಲೇರಿಯಲ್ಲಿ ಇಳಿದು ಆಟೋ ಹಿಡಿದು
ಬೆಟ್ಟದ ತಪ್ಪಲಿಗೆ ಬರಬಹುದು. ಶಕ್ತಿ ಇರುವವರು ಮೆಟ್ಟಿಲು ಹತ್ತಿ ಬರಬಹುದು. ಸ್ವಂತ ವಾಹನ
ಇರುವವರು ರಸ್ತೆ ಮಾರ್ಗದಲ್ಲಿ ಬೆಟ್ಟದ ಮೇಲೆ ಹೋಗಲು ಅವಕಾಶವಿದೆ. ಗ್ರಾಮದ
ಹೊಟೆಲ್ ದೂರವಾಣಿ -೯೯೦೧೮೮೩೨೫೨, ಮನೆ:೯೩೪೨೨೬೮೧೨೫-೦೮೧೫೨-೨೩೭೫೭೦). ಹೆಚ್ಚಿನ
ಮಾಹಿತಿಗೆ ದೇವಾಲಯದ ಕನ್ವೀನರ್ ಆದ ವಿ. ವೇಣುಗೋಪಾಲಗೌಡ ಅವರನ್ನು 94491 87049, 08152-237621 ಮೂಲಕ ಸಂಪರ್ಕಿಸಬಹುದು.
No comments:
Post a Comment